Monday 13 March 2017

ನಿಸರ್ಗ



ವರುಷದಿಂ ವರುಷಕೆ
ಮಳೆ ಕಡಿಮೆಯಾಗುತಿರೆ
ದಿವಸದಿಂ ದಿವಸಕೆ
ಇಳೆ ಒಣಗಿ ಬಾಯ್ಬಿಟ್ಟು ಗೋಳಿಡುತಿರೆ

ಹಸಿರುಟ್ಟ ಗಿರಿವನಗಳಂ ಕಡಿದು
ಬೃಹದಾಕಾರದ ಕಟ್ಟಡಗಳಂ ಕಟ್ಟಿ
ಬಣ್ಣ ಬಣ್ಣದ ಬಟ್ಟೆಗಳನ್ ತೊಡಿಸಿದೊಡೆ
ನೀ ಮಾಡಿಟ್ಟಿಹ ಮದ್ದು-ಗುಂಡುಗಳನುಂಡು
ಬದುಕಲಾದಿತೆ ಹೇಳು !?

ಬರಿದಾದ ಕಾಡುಮೇಡುಗಳತೊರೆದು
ಬಯಲಿಗೆ ಬಂದ ಪ್ರಾಣಿ ಪಕ್ಷಿಗಳು ಗೀಳಿಡುತಿರೆ.....ದಕ್ಕೀತೆ ಜಯ ?
ಇನ್ನಾದರೂ ಮರಗಿಡಗಳನುಳಿಸಿ  ನಿಸರ್ಗವನುಳಿಸು....

ಕಿವಿಮಾತಲ್ಲವೋ ಮೂಢ ಇದು ಕೊನೆಮಾತು.

-ನಗೆಮಲ್ಲಿಗೆ

Wednesday 8 March 2017

ಅವಳ
ಕಣ್ಣೂಳಗಿನ ಕೂಗು
ಮನದಲ್ಲಿನ ನೋವು
ಕಡುರಾತ್ರಿಲಿ ಕಂಡ ಕನಸು
ಎಲೆಉದುರಿದ ಬೋಳು ಮರ
ಮತ್ತೆ ಚಿಗುರೋಡೆಯಲು
ಸೋತು ಸುಮ್ಮನಾಗಿಸುವ ಬರ
ನಿಂತ ನೀರಿನೂಳಗೆ ಒಂದೊಂದೇ
ಕಲ್ಲು ಎಸೆದು ರಾಡಿಯಾಗಿರುವ ಕರೆ
ಹಿಂತಿರುಗಿ ನೋಡಿದರೆ ಕೈಚಾಚಿ
ಕರೆವ ಅದಾವೂದೋ ಜೀವ !
ಯಾಕೋ ಕಾಣೆ ಎಲ್ಲವೂ ಒತ್ತಿ
ಹೇಳುತಿರುವಂತೆ ಭಾಸವಾಗುತ್ತದೆ
ಸುವರ್ಣಯುಗಕಂಡು ಮೆರೆದ
ಸಾಮ್ರಾಜ್ಯಗಳೆಲ್ಲ ನಶಿಸಿದ ಕಥೆಯ
ಈಹೂತ್ತಿನಲಿ....ಕಣ್ಣಂಚ ಸವರಿ
ಕೆನ್ನೆಮೇಲೆ ಗುಳಿಬಿಳುವಂತೆ
ನಕ್ಕು ಸುಮ್ಮನಿರಲು ಆದಿತೆ?

-ನಗೆಮಲ್ಲಿಗೆ

Thursday 13 August 2015

ಬದುಕು

ಕುಂಟು ಹುಡುಗನೊಬ್ಬ ಕಡಿದಾದ
ಇಳಿಜಾರನ್ನು ಸರಾಗವಾಗಿ ಇಳಿಯುತ್ತಾನೆ

ಪಕ್ಕದಲ್ಲಿ ಇರುವೆಯೊಂದು  ​ಬೆನ್ನಮೇಲೆ
ಸಕ್ಕರೆ ಮೂಟೆಹೂತ್ತು  ನಿರಾಯಾಸವಾಗಿ ಸಾಗುತ್ತದ

ಕಾಗೆಯೂಂದು ಅರಿವಿಲ್ಲದೆ ಕೋಗಿಲೆ ಮೊ​ಟ್ಟೆಗೆ
ಕಾವುಕೂಟ್ಟು ಮರಿಮಾಡುತ್ತದ

ರಾತ್ರಿವೇಳೆ ಕಾಣುವ ಗೂಬೆ ಭಗ್ನಪ್ರೇಮಿಯೂಬ್ಬನಿಗೆ
ಸುಂದರವಾಗಿ ಕಾಣುತ್ತದೆ, ಕವನ ಕಟ್ಟುವಂತೆ ಹುರಿದುಂಬಿಸುತ್ತದೆ

ಕತ್ತಲಲ್ಲಿ ಮಿಂಚು ಹುಳುವನ್ನು ನೋಡಿ  ಕಾಮನಬಿಲ್ಲನು  ಕಂಡವಳಂತೆ ನಗುತ್ತಾಳೆ,
ಮುಂಜಾನೆ ದೇವರ ಪೂಜೆಗೆಂದು ಇಟ್ಟ ಹೂಗಳನು ತಾನೆ ಮುಡಿದು ಸಂಭ್ರಮಿಸುತ್ತಾಳೆ 

ನೆನಪುಗಳೆಲ್ಲವು ನೆಪವಾಗಿ ಹಠಮಾಡುವಾಗ ದೂರದಲೆಲ್ಲೊ
ವಿರಹಗೀತೆಯೂಂದು ಕೇಳುತ್ತದೆ 

ಸಿಗ್ನಲ್ ಬಳಿ ಕುಳಿತು ಚಪ್ಪಲಿ ಹೊಲೆಯುವವನ ಮರಗಟ್ಟಿದ 
ಕೈಗಳುಮೊಂಡು ಸೂಜಿಯನ್ನು ನೋಡುತ್ತದೆ

ನಾಟಕದ ಬದುಕಲ್ಲಿ ಎಲ್ಲರು ಬಂದು ನಟಿಸಿ ಹೋಗುತ್ತಾರೆ ನಾಟಕಕಾರ ಮಾತ್ರ
ಎಲ್ಲೋಕುಳಿತು ಎಲ್ಲರನ್ನು ನೋಡುತ್ತ ತನ್ನದೇಆದ ಲೆಕ್ಕಚಾರವನ್ನು ಹಾಕುತ್ತಿರುತಾನೆ.

-ನಗೆಮಲ್ಲಿಗೆ
 

Tuesday 4 August 2015

ನೀನೆ

ಒಣ ಎದೆಯಲ್ಲಿ
ಹನಿ ಹಾಯಿಸಿ
ಒಲವ ಬಿತ್ತಿಹೋದವ
ನೀನಲ್ಲವೆ..?

ಹೆಮ್ಮರವಾದ
ಆ ಒಲವ ಇಂದು
ಕಡಿದು ಉರುಳಿಸಿದವ
ನೀನಲ್ಲವೆ...?

ಬಿಗಿದ ಎದೆಯಲುಳಿದ
ಬೇರುಗಳ ಕೀಳುವ
ಧೈರ್ಯ ಇದ್ದರೆ
ಬಂದೊಮ್ಮೆ ನಿಲ್ಲು ಎದುರು .....!!!

ಕಣ್ಣ ಬಟಲಲಿ ಹಿಡಿಟ್ಟ
ಹನಿಂದ ಉಳಿಸಿದ
ಬುಡದ ಬೇರುಗಳ
ಕಿತ್ತಿಡು...ಬಂದು ನೀನೆ 

ನಗೆಮಲ್ಲಿಗೆ

Monday 3 August 2015

ನನ್ನದೇ ಕೋಣೆ


ಕೋಣೆಯ ಬಿಳಿ ಛಾವಣಿ
ಗಹಗಹಿಸಿ ನಗುತಿದೆ
ಬಣ್ಣ ಬಣ್ಣದ ಗೋಡೆಗಳು
ಕೇಕೆ ಹಾಕಿ ಅಣಕಿಸುತ್ತಿವೆ

ಪಕ್ಕದ ಛೇರು,ಟಿಪಾಯಿ,
ಬೀರು, ಕಿಟಕಿ ಎಲ್ಲವೂ ಸ್ಥಬ್ದವಾಗಿವೆ
ಚಲ್ಲಾ ಪಿಲ್ಲಿ ಆದ ಬಟ್ಟೆಗಳು
ಪ್ಯಾನಿನ ಗಾಳಿಗೆ ಬಳಿಬಂದು ಮೈಸವರಿ
ಸಂತೈಸುತಿವೆ ಸಂತಾಪ ಸೂಚಿಸಿ

ಮೇಲೆ ಮೂಲೆಯಲ್ಲಿಟ್ಟ
ಕೂಡೆ, ಮಳೆಗಾಲ ಬಂದರೂ
ಮೈತೊಳೆಯದೆ ಇರಿಸಿಹೆ ಎಂದು
ಹಿಡಿ ಶಾಪ ಹಾಕುತಿದೆ

ಮುಖವಾಡ ತೊಟ್ಟ ಆ ಕ್ರೂರಿ
ಮನುಷ್ಯನ ನಿಜರೂಪ ಕಂಡು
ಬಿಕ್ಕಳಿಸಲಾಗದೆ ಬಿಗಿ ಹಿಡಿದ
ತುಟಿಗಳ ನೋಡಿ ಕನ್ನಡಿ ಚೀರುತಿದೆ

ಅರೆ ಎಲ್ಲವು ನನ್ನ ಕೋಣೆಯ
ವಸ್ತುಗಳೆ!!! ಬಗೆಬಗೆಯ ಭಾವಗಳ
ಬಿತ್ತರಿಸುತಿವೆ, ಇವಾವು ನಿರ್ಜೀವಿಗಳಲ್ಲ
ಈಗ ತಾನೆ ಮಾತಾಡಲು ಶುರು ಮಾಡಿದ
ಮೂಖ ಪ್ರೇಕ್ಷಕರೇನೂ!!!!

ಇಲ್ಲಿವರೆಗೆ ಸುಮ್ಮನೆ ಕುಳಿತು
ನನ್ನೆಲ್ಲಾ ಭಾವನೆಗಳ ತೂಕಡಿಕೆಗೆ
ಸೋಬಾನೆ ಹಾಡಿದ ವಸ್ತುಗಳೆ ಇವೆಲ್ಲಾ
ಇಂದು ಬಡಿದೆಬ್ಬಿಸಿ ಬಿಂಕಿಸುತಿವೆ!!!!!

- ನಗೆಮಲ್ಲಿಗೆ

ಗಜಲ್


ಸದಾ ನಿನ್ನ ಬಳಿಯೆ ಇದ್ದ ಜೀವ ಅದಾವಗ ದೂರ ಆಯಿತೊ ತಿಳಿಯುತಿಲ್ಲ
ಈ ಬಾಳ ದಾರಿಯಲಿ ಇನ್ನು ಮುಂದೆ ನೀ ಇರೊದಿಲ್ಲ ಅನ್ನೊದನ್ನ ಸಹಿಸೋಕು ಆಗ್ತಿಲ್ಲ

ನೀ ಇಲ್ಲದೆ ಖುಷಿ ಪಡೊದಾದರು ಹೆಗೆ? ಈ ಜೀವಕ್ಕೆ ನೀಇಲ್ಲದೆ ಜೀವನನೇ ಇಲ್ಲ
ತನ್ನದೇ ಆದ ದಾರಿಲಿ ಈ ಎಳೆದುಕೊಂಡು ಹೋಗ್ತಿದೆ ನನ್ನ ಈ ಪಾಪಿ ಜಗತ್ತು

ನೀ ನನಗೆ ಸಿಕ್ಕಾಗಲೇ ಗೊತ್ತಾಗಿತ್ತು ನಿನ್ನ ಕಳ್ಕೊಂಡ್ ಬಿಟ್ಟಿದಿನಿ ಅಂತ, ನಾನು
ಹೃಯದಕ್ಕೋಸ್ಕರ ರೋಧಿಸ್ತಿದ್ದೆ ಅಮಾಯಕ ಹೃದಯ ನನಗೊಸ್ಕರ ಚೀರತಿತ್ತು...

ರೆಪ್ಪೆಯಿಂದಾಚೆ ಜಾರಿದ ಕನಸುಗಳು ಛಿಧ್ರ ಛಿದ್ರವಾಗಿವೆ ಈಗ

-ನಗೆಮಲ್ಲಿಗೆ

Wednesday 8 April 2015

ಕವನ-ಮನಸ್ಸು

ಕಳೆದ ವಾರ ಪಂಜು ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಕವನ


http://www.panjumagazine.com/?p=10555

ಅಂದು ಬಲತ್ಕಾರಕ್ಕೆ
ಒಳಗಾದ ಮನಸ್ಸು
ಹಡೆದ ನೆನಪುಗಳು
ಇಂದು ಬೆಳೆದು ನಿಂತಿವೆ
ಅನಾಥವಾಗಿ...
ಅದರಲ್ಲಿ ಕೆಲವು ಕುರೂಪಿ
ಆದರೆ, ಮತ್ತೆ ಕೆಲವು
​ನಿರ್ದಯಿಗಳು ​....
ಕಣ್ಣಸಡಿಲಿಕೆಯಲ್ಲಿ
ಬಿಟ್ಟ ಬಾಣಗಳು
ನೇರವಾಗಿ ಎದೆಗೆ ನಾಟಿ
ಅಸಹಾಯಕತೆಯ ಕಂಡು
ಗಹಗಹಿಸಿ ನಗುತಿವೆ
ನೆನಪುಗಳ ಹೊತ್ತು ಹೆತ್ತ
ವಣೆ ನಿನ್ನದೇ ಏಂದು.....

ಕಂಡವರಿಲ್ಲ ಕಂಬನಿಯ
ಹಸಿವ, ತೀರಿಸುವವರಿಲ್ಲ
ಹಂಬಲಿಯ ಋಣವ
ಅರ್ಧ ಬಿಂದಿಗೆ ನೀರು
ತುಂಬಿ ತುಳುಕುತಿವೆ
ಕೆನ್ನೆ ದಿಣೆಗಳ ಮೇಲೆ....

ಕಾಲುದಾರಿ ಕಡಿದಾಗಿದೆ
ತುಂಬಾ ಇಳಿಜಾರಿದೆ
ಅಲ್ಲಲ್ಲಿ, ಸೋಲುವವಳು
ನಾನಲ್ಲ ಛಲಗರ್ತಿ ನಾ
ನನ್ನದಲ್ಲದ ತಪ್ಪಿಗೆ
ಚನ್ನಕೇಶವನ ಆಣೆ
ಸೋತು ಗೆಲ್ಲುವವಳು ನಾನೆ..

-ನಗೆಮಲ್ಲಿಗೆ

Wednesday 28 January 2015

ನೀ ಹೊರಟ ನಂತರವೂ :

ನೀ ಹೊರಟ ನಂತರವೂ 
ಗಾಳಿ,ನೀರು,ನೆಲ,
ಆಕಾಶ ಎಲ್ಲವೂ 
ಮೊದಲು ಇದ್ದಹಾಗೆ ಇವೆ 

ನನ್ನ ಹೃದಯದ ಕೋಣೆ 
ಮಾತ್ರ ಕಳೆಗುಂದಿ 
ನೆನಪುಗಳ ಹೊಡೆತಕ್ಕೆ ನಲುಗಿ 
ಹಾಳು ಹಂಪೆಯಂತಾಗಿದೆ

ನೀ ಹೊರಟ ನಂತರವೂ
ಮುಂಜಾನೆ ಮುಸಂಜ್ಜೆ , ಹಗಲು 
ರಾತ್ರಿ, ಸೂರ್ಯ ಚಂದ್ರ ಎಲ್ಲವೂ 
ಮೊದಲು ಇದ್ದಹಾಗೆ ಇವೆ 

ನನ್ನುಸಿರಿನ ನೆಲಮಾತ್ರ 
ಭೀಕರಬರಗಾಲ ಬಡಿದಂತೆ 
ಬಿಸಿಗಾಳಿಯಲಿ ಬಳಲಿ
ಮನವನ್ನೆಲ್ಲಾ ಬಿರುಕುಗೊಳಿಸಿದೆ 

ನೀ ಹೊರಟ ನಂತರವೂ
ಪಾರ್ಕಿನ ಮರ-ಬೆಂಚುಗಳು ಯತಾಪ್ರಕಾರ
ಬಂದು ಕೂತರಿಗೆ ನೆರಳುನೀಡಿ 
ಆಯಾಸ ವಿಲ್ಲದೆ ಅವರ ಹೊರುತ್ತಿವೆ 

ನನ್ನ ಕನಸುಗಳು ಮಾತ್ರ ಹುಚ್ಚು 
ಹಿಡಿದ ಫಕೀರನಂತೆ ನಿನ್ನನೆಸರನ್ನೇ 
ಬಡಬಡಿಸುತ್ತಾ ಭೂತದ ಭ್ರಮೆಯಿಂದ 
ಹೊರಬರಲಾಗದೆ ಚೀರುತ್ತಿವೆ. 







-ನಗೆಮಲ್ಲಿಗೆ 

Thursday 22 January 2015

ಭಾವ ಬೆಳೆ :-)



ಕುದಿಯುವ 
ಭಾವನದಿಗೆ
ಸಮುದ್ರದ ಭೇಟಿ 
ಆಗಬೇಕಿದೆ 
**********
ಎದೆ ಕಡಲೊಳಗೆದ್ದಿದೆ
ಸುನಾಮಿ
ಬಂದು
ಕಾಪಾಡುವವರು
ಯಾರು ಸ್ವಾಮಿ
**********
ಹುಚ್ಚುತನಕ್ಕೊಂದು
ಹೆಸರಿಡುವುದಾದರೆ
ನಿನ್ನ ಹೆಸರೇ ಇಡುವೆ
***********
ಎತ್ತಿಡಲಿ ಎಲ್ಲಿಗೆ 
ನೆನ್ನೆ ಮೊನ್ನೆಗಳ ? 
ನಾಳೆಗಳೂ 
ನೀನೆ ಆಗಿರುವಾಗ

-ನಗೆಮಲ್ಲಿಗೆ 

Monday 8 December 2014

ಕವನ - ಚಂದಿರ

ಇಂದಿನ ಪಂಜುವಿನಲ್ಲಿ (ಅಂತರ್ಜಾಲ ಪತ್ರಿಕೆ ) ಪ್ರಕಟವಾದ ನನ್ನ  ಒಂದು ಕವನ , ಧನ್ಯವಾದಗಳು ಪಂಜು ಬಳಗಕ್ಕೆ 
೧. ಕೊಳಕ್ಕೆ
ಎಸೆದ ಕಲ್ಲುಗಳು
ಈಜುತಿದ್ದ ಚಂದಿರನ
ಏಕಾಂತವನ್ನು
ಭಗ್ನಗೊಳಿಸಿದೆ 

೨. ಒಡೆದ ಕನ್ನಡಿ;
ಬೇಲಿ ಅಂಚಲ್ಲಿ
ಚಂದಿರ ಚೂರಾಗಿ
ಬಿದ್ದಿಹನು  
೩. ರಾತ್ರಿ ಬೆನ್ನ ಹಿಂದೆ
ಬಿದ್ದ ಚಂದಿರ
ಅಪ್ಪನ ಕರೆದ ತಕ್ಷಣ
ಬೆಟ್ಟದ ಹಿಂದೆ
ಅಡಗಿ ಕುಳಿತ
೪. ಕೊಡಕ್ಕೆ ಹಗ್ಗ ಕಟ್ಟಿ
ಕೆಳಗಿಳಿಸಿ,
ಮೇಲೆತ್ತಬೇಕು;
ಬಾವಿಗೆ ಬಿದ್ದ
ಚಂದಿರನ
ಬದುಕಿಸಲು.
೫. ಚಳಿಯ ಹೊಡೆತಕ್ಕೆ
ಚಂದ್ರನು ಮೋಡದ
ಹೊದಿಕೆಯಲಿ
ಅವಿತು ಕುಳಿತಿದ್ದಾನೆ
೬. ಹಸಿದ ಹೊಟ್ಟೆ ಈಗ
ಚಂದ್ರನನ್ನೇ
ಮುರಿದು ತಿನ್ನು
ಎನ್ನುತಿದೆ 
 ೭. ಅಂದಕ್ಕೆ ಸೋತು
ಮೀನುಗಳು ಬಿಡದೆ
ಮುತ್ತಿಡುತಿವೆ
ಚಂದಿರ ಬಿಂಬಕ್ಕೆ 
-ನಗೆಮಲ್ಲಿಗೆ 

Monday 24 November 2014

ನಾ 
ಬೇಡವೆಂದ 
ಮಾತ್ರಕ್ಕೆ ಸಂಜ್ಜೆ 
ಮುಂಜಾವುಗಳು 
ಬಾರದೆ ಇರುವವೇ ..... 

ನೀ 
ಬೇಕೆಂದಾಕ್ಷಣ
ಅಮಾವಾಸ್ಯೆಯಲಿ 
ಮೊಡುವನೇ 
ಚಂದಿರ.... 

-ನಗೆಮಲ್ಲಿಗೆ