ಕಾಲುವೆಯ ಮೇಲೆ ಕುಳಿತು
ಕಲ್ಚಾಚಿ ಒಂದೊಂದೇ ಕಲ್ಲು ಎಸೆದು
ತಿಳಿ ನೀರಲ್ಲಿ ಸಣ್ಣ ಸಣ್ಣ ಅಲೆ ಎಬ್ಬಿಸಿ
ಕಂಡ ಕನಸುಗಳು ಸವಿ ಅಂದು
ಯಾವುದೊ ದೂರದೂರ
ಜನ ಸಾಗರವಿದು
ಕಲ್ಮಶವಿಲ್ಲದ ಪುಟ್ಟ ಪುಟ್ಟ ಕಂಗಳು
ತಿಳಿ ಮನದ ಸರೋವರ
ಶಾಂತ ಚಿತ್ತ, ಬರಿ ಕನಸುಗಳ
ನನಸಾಗಿಸೋ ಗುರಿ ಮಾತ್ರ
ಕಣ್ಣ ಅಳತೆಗೂ ಮೀರಿದ
ಬೇಲಿ ಇತ್ತು ಸುತ್ತ
ಕಣ್ಣ ತಪ್ಪಿಸಿ ಅದಾರು ಬಂದವರು
ತಿಳಿಗೊಳವ ಕಲಕಿ ಮೌನದ
ಮುಸುಕೊದ್ದು ಮಲಗಿದ್ದ
ಮನವ ರಾಡಿಗೊಳಿಸಿದರು
ನೀರಿಲ್ಲದೆ ಬತ್ತಿಹುದಂತೆ
ಕಾಲುವೆ ಇಂದು…. ಆದರೆ
ಹಳೆದಾದ ಕಟ್ಟೆ, ಸುತ್ತಲು
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ
ಸಣ್ಣ ಸಣ್ಣ ಕಲ್ಲುಗಳ
ರಾಶಿ ಉಂಟಂತೆ
ಭೋರ್ಗರೆಯುತಿದೆ
ತಿಳಿ ಮನದ ಸರೋವರ
ಕೈ ಜಾರಿದ ಭಾವನೆಗಳ
ಮನಸು ಆಗಿದೆ ಬಲು ಭಾರ,
ಚದುರಿದೆ ಕನಸು ಸುತ್ತಲು
ಕಂಬನಿ ಇಲ್ಲದೆ ಹಿಂಗಿದೆ ಕಂಗಳ
-ಅನುಪಮ ಎಸ್ ಗೌಡ
No comments:
Post a Comment